ಕವಿ ‘ಜೀವಯಾನ’ ಮಂಜುನಾಥರ ಒಂದು ಕವಿತೆ ‘ಹಕ್ಕಿಪಲ್ಲಿ’ ಎಂದು. ಕವಿ ಒಂದು ದಿನ ಕೂತು ತನ್ನ ಆಲಸ್ಯದಿಂದಾಗಿಯೋ, ಅವಕಾಶ ವಂಚಿತನಾಗಿಯೋ ಅಥವಾ ತನ್ನ ಕೈಲಿಲ್ಲದ ಕೇವಲ ಅಕ್ಷರಗಳೇ ತುಂಬಿರುವ ಬದುಕಿನಿಂದಾಗಿಯೋ ನಾನು ಏನೆಲ್ಲ ಕಳೆದುಕೊಂಡಿರಬಹುದು ಎಂದು ಲೆಕ್ಕ ಹಾಕುತ್ತ ಆವತ್ತು ಆತಂಕಕ್ಕೆ ಒಳಗಾಗುತ್ತಾನೆ. ಸುತ್ತಲಿನ ಜನರನ್ನು ನೋಡುತ್ತ ತಾನೂ ಇವರಂತಾಗಬಹುದಿತ್ತು ಎಂದು ಅನಿಸುತ್ತದೆ. ಹಣ ಗಳಿಸಿದವನೊಬ್ಬ, ಹೆಣ್ಣು ಗಳಿಸಿದವನೊಬ್ಬ, ಇನ್ಯಾರಿಗೋ ಜ್ಞಾನ, ಪ್ರತಿಭೆ- ಕೀರ್ತಿ ಇವೆಲ್ಲರ ಸಾಧನೆಗಳಿಂದ ಹೆಚ್ಚಿರುತ್ತಾರೆ. ಮಂಕು ಕೋಣೆಯಲ್ಲಿ ಮರದ ಮೇಜಿನ ಮೇಲೆ ಕುಳಿತು ಕಿಟಕಿ ಆಚೆ ಕಣ್ಣುಗಳ ತವಕವನ್ನು ಎಷ್ಟೋ ದಿಟ್ಟಿಸುತ್ತಾ ನಾನೂ ಏನೇನೋ ಆಗಬಹುದಿತ್ತು ಎಂದು ನೊಂದುಕೊಳ್ಳುತ್ತಿರುವಾಗ ಆತನಿಗೆ ಕಿಟಕಿಯಾಚೆ ಅಸ್ಪಷ್ಟವಾಗಿ ಆಕಾಶದಲ್ಲಿ ಒಂದು ಹಕ್ಕಿಪಲ್ಲಿ ಹೊಡೆಯುತ್ತಿರುವುದು ಗೋಚರಿಸುತ್ತದೆ. ಕವಿಗೆ ರೋಮಾಂಚನವಾಗುತ್ತದೆ. ಚೇತನ ಸಿಗುತ್ತದೆ.
ಆ ಕ್ಷಣ ಕವಿಗೆ ಹೊಸತೊಂದು ಜೀವನದರ್ಶನ ಹೊಳೆಯುತ್ತದೆ- ನಾವು ನಿಜವಾಗಲೂ ಏನಾದರೂ ‘ಆಗಲೇಬೇಕೆ’? ಹಕ್ಕಿಯೊಂದರ ಪಲ್ಲಿಯನ್ನು ಗಮನಿಸುವ, ಬೆರಗಾಗುವ ಶಕ್ತಿಯಿದ್ದರೆ ಸಾಲದೇ? ಇದರ ಹೊರತು ನಾವು ಏನೇನೋ ಆಗಬೇಕು ಎಂದು ಬಡಿದಾಡುವುದೆಲ್ಲವೂ ಜಗವನ್ನು ಮೆಚ್ಚಿಸಲು ಅಷ್ಟೇ ತಾನೇ?
ಮೊನ್ನೆ ಶುಕ್ರವಾರ ನಾನು ಬೆಂಗಳೂರಿನ ಯಲಹಂಕದಲ್ಲಿ ಜರುಗಿದ ಏರೋ ಇಂಡಿಯಾ ಪ್ರದರ್ಶನ ವೀಕ್ಷಿಸಲು ಹೋಗಿದ್ದಾಗ ನನಗುಂಟಾದ ಅನುಭವವಿದು. ಭಾರತವೂ ಸೇರಿದಂತೆ ಹಲವು ಮುಂದುವರಿದ ದೇಶಗಳ ಲೋಹದ ಹಕ್ಕಿಗಳು ಬೆಳಿಗ್ಗಿಂದ ಸಂಜೆಯ ತನಕ ನಮ್ಮೆದುರು ನಮ್ಮ ಕೌತುಕವನ್ನು ತಣಿಸಲೆಂದೇ, ರಂಜಿಸಲೆಂದೇ ಆಕಾಶದುದ್ದಕ್ಕೂ ಹಾರಾಡುತ್ತಾ ಪಲ್ಲಿ ಹೊಡೆಯುತ್ತಾ ಸೂರ್ಯನ ವಿರುದ್ಧ ಜಿದ್ದಿಗೆ ಇಳಿಯುತ್ತಾ ಘಟನೆ ತಿರುಗುತ್ತಾ… ಬಾನು ಕಂಪಿಸುವಂತೆ ಗರ್ಜಿಸುತ್ತಾ… ಅಹಾ ಮಾನವನ ಕಲ್ಪನಾಶಕ್ತಿಗೆ ಅದನ್ನು ವಾಸ್ತವಗೊಳಿಸುವ ಚತುರತೆಗೆ ಶರಣೋ ಶರಣು. ಏನು ನೋಡಿದರೂ ಎಷ್ಟು ನೋಡಿದರೂ ಸಾಲದು ಒಂದು ಜೀವನ ಸಾಲದು.
ನೀವು ಡಾಲ್ಫಿನ್ ಶೋಗೆ ಸಾಕ್ಷಿಯಾಗಿದ್ದರೆ ಇದೂ ಹಾಗೇ ಅನಿಸುತ್ತದೆ. ಇವುಗಳಿಗೆ ಇಷ್ಟೊಂದು ಬುದ್ಧಿ ಕೌಶಲ್ಯ ಹೇಗೆ ಬಂತು ಎಂದು ಅಚ್ಚರಿಗೊಳ್ಳುವಂತೆ ಡಾಲ್ಫಿನ್ಗಳು ಕೊಳದಲ್ಲಿ ಸರ್ಕಸ್ ಮಾಡುತ್ತವೆ. ನೀರಲ್ಲಿದ್ದವು ಪಟ್ಟನೆ ಮುಗಿಲಿಗೆ ಹಾರಿ ಆಲಸ್ಯದಿಂದ ಕೆಳಗೆ ಬೀಳುತ್ತವೆ. ಕೊಳದ ಕಟ್ಟೆಯ ಮೇಲೆ ಬಾಲದ ಮೇಲೆ ನಿಂತು ನಡೆಯುತ್ತವೆ, ನರ್ತಿಸುತ್ತವೆ. ಗಾರುಡಿಗನನ್ನು ಮುತ್ತಿಯ ಮೇಲೆ ಕೂರಿಸಿಕೊಂಡು ಕೊಳದ ಸುತ್ತು ಹೊಡೆಸುತ್ತವೆ. ಈ ಲೋಹದ ಹಕ್ಕಿಗಳೂ ಡಿಟ್ಟೋ ಹಾಗೆ. ನೆಲದಿಂದ ಹಾರುತಲೇ ಮೂತಿಯನ್ನು ಮೇಲ್ಮುಖ ಮಾಡಿ ಅನಂತ ಆಕಾಶವನ್ನು ಭೇದಿಸುತ್ತಾ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗುತ್ತವೆ. ಸ್ವಲ್ಪ ಹೊತ್ತು ನಿಶ್ಯಬ್ದ. ತದನಂತರ ಅದೇ ಜಾಗದಿಂದ ಮಧ್ಯಾಹ್ನದ ಊಟ ಮುಗಿಸಿ ಹೊಟ್ಟೆ ಭಾರವಾಗಿ ರುಚ ಆಲಸ್ಯದೊಂದಿಗೆ ಅಲ್ಲಲ್ಲೇ ತಿರುಗುತ್ತಾ ಕೆಳಗೆ ಬೀಳುತ್ತವೆ. ಅರೇ ಇದೇನು ಪೈಲಟ್ಟು ಕೈಬಿಟ್ಟು ಕೂತನೇ ಎಂದು ನಾವು ಭಯಗೊಳ್ಳುವ ಹೊತ್ತಿಗೆ ನಿದ್ದೆಯಿಂದ ಎಚ್ಚೆತ್ತವನಂತೆ ಹಕ್ಕಿಗಳು ಪುನಃ ಇನ್ನೆತ್ತಲೋ ಹಾರತೊಡಗುತ್ತವೆ. ಇಳಿಮುಖವಾಗಿ ನೆಲವನ್ನೇ ಭೇದಿಸುವ ಕೆಚ್ಚಿನಿಂದ ನಮ್ಮೆಡೆ ಹಾರಿ ಬರುತ್ತವೆ. ಪಟ್ಟನೆ ದಿಕ್ಕು ಬದಲಾಯಿಸುತ್ತವೆ.
ರಷ್ಯಾದ SU-57, ಭಾರತದ TEJAS, ಅಮೆರಿಕದ F-35 ಒಂದಕ್ಕಿಂತ ಒಂದು ಮುಂದು. ಇವುಗಳ ನಡುವೆ ನಮ್ಮ ಸೂರ್ಯಕಿರಣಗಳು ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾ ಮಕ್ಕಳು ಯೂನಿಫಾರ್ಮ್ ಧರಿಸಿ ಬಣ್ಣಬಣ್ಣದ ಕುಚ್ಚುಗಳನ್ನು ಹಿಡಿದು ಕ್ರೀಡಾಂಗಣದ ಕುಣಿತದಲ್ಲಿ ನಲಿದಾಡಿದಂತೆ ಆಕಾಶದಲ್ಲಿ ವಿಧವಿಧವಾಗಿ ರಂಗೋಲಿ ಬಿಟ್ಟು ಕೆಳಿದ್ದ ಮಕ್ಕಳನ್ನು ಮತ್ತು ಮಕ್ಕಳ ಮನಸ್ಸಿನವರನ್ನು ರಂಜಿಸುತ್ತವೆ.
ನೆರೆದಿದ್ದ ಪ್ರೇಕ್ಷಕರಲ್ಲಿಯೂ ಅಂಥದ್ದೇ ವೈವಿಧ್ಯ. ಅಹಾ ಭವ್ಯ ಭಾರತವೇ ಅಲ್ಲಿತ್ತು. ಕೋಟ್ ಧರಿಸಿದ್ದ ಸಿರಿವಂತನಿದ್ದ, ಪಂಚೆಯುಟ್ಟ ಹಳ್ಳಿಯವನಿದ್ದ, ಸ್ಕರ್ಟ್ ತೊಟ್ಟ ಆಧುನಿಕಳಿದ್ದಳು, ಸೆರಗು ಹೊದ್ದ ಗೃಹಿಣಿಯಿದ್ದಳು. ಮುದುಕನಿದ್ದ ಎಳೆಯ ಕಂದನಿದ್ದ, ಕನ್ನಡದವನಿದ್ದ, ತಮಿಳು, ಹಿಂದಿ, ಬೆಂಗಾಲಿ… ದಕ್ಷಿಣ ಉತ್ತರದವರೆಲ್ಲರೂ ಇದ್ದರು, ನೀರಲ್ಲಿ ನೀರಾಗಿ ಬೆರೆತಿದ್ದರು. ಯಲಹಂಕದ ಹಿಂದೆ ಒಂದು ಕೆರೆಯಿದೆ. ಕೆರೆಯ ಏರಿ ಮೇಲೆ ಉಚಿತವಾಗಿಯಾದರೂ ಕಣ್ತುಂಬಿಕೊಳ್ಳಲು ಜನ ಹಗಲಿಡೀ ನೆರೆದಿದ್ದಾರೆ. ಇಷ್ಟೇ ಮೊದಲೇ ಅರಿತಿದ್ದವರಂತೆ ಅಲ್ಲಿಗೆ ತಳ್ಳುಗಾಡಿಯ ಜ್ಯೂಸ್, ಸೋಡಾ, ಸಮೋಸಾ ಅಂಗಡಿಗಳು ಬಂದು ನಿಂತಿವೆ. ಸ್ವಲ್ಪ ದೂರದಲ್ಲಿ ಒಂದು ಕೆರೆ. ಕೆರೆಯ ಅಂಗಳದಲ್ಲಿ ಹುಲ್ಲು ಹಾಸಿನ ಮೇಲೆ ಜನ ಜಮಖಾನೆ ಹಾಸಿಕೊಂಡು ಜಮಾಯಿಸಿದ್ದಾರೆ. ರಸ್ತೆ ಬದಿ ಬಿರಿಯಾನಿ ಹೋಟೆಲ್ ಇದೆ. ಹೋಟೆಲಿನವನು ತನ್ನ ಪಾರ್ಕಿಂಗ್ ಜಾಗದಲ್ಲಿಯೇ ಒಂದು ಪಂದಾಲ್ ಹಾಕಿಸಿಬಿಟ್ಟಿದ್ದಾನೆ. ಪ್ರೇಕ್ಷಕರಿಗೆ ಉಚಿತ ಪಾರ್ಕಿಂಗ್, ಉಚಿತ ನೆರಳು. ಬದಲಿಗೆ ನೀರು, ಊಟ, ಕುರುಕು ಮುರುಕು ತಿಂಡಿಗಳ ವ್ಯಾಪಾರ.
ಹಹ್ಹ… ಇವರೆಲ್ಲ ಕೇವಲ ಸರ್ಕಸ್ ಮನರಂಜನೆಗಾಗಿ ಬಂದಿದ್ದವರಲ್ಲ, ನನ್ನ ಸುತ್ತಮುತ್ತಲಿನ ಅನೇಕರು ಈ ವಿಮಾನ ಇದು, ಇದು ಈ ದೇಶದ್ದು, ಇದರ ಶಕ್ತಿ ಇಂಥದ್ದು ಎಂದು ಮಾತಾಡಿಕೊಳ್ಳುತ್ತಿದ್ದರು. ಮೊದಲೇ ಓದಿಕೊಂಡು ತಿಳಿದುಕೊಂಡು ಬಂದಿದ್ದರು. ಕೆಲವರು ಮಗನಿಗೆ ಅಚ್ಚರಿಯನ್ನು ಮಾಡಿಕೊಬಂದೆವು ಎಂಬ ಜೋಕು ಸಹ ಹರಿದಾಡುತ್ತಿತ್ತು. ಪೈಲಟ್ಟುಗಳ ಪಂಗಡವಿದೆ. ಎಂಥವರೂ ಮರುಳಾಗುವಂಥ ಆಕರ್ಷಕ ಫಿಟ್ನೆಸ್. SU-57 ವಿಮಾನದ ಪೈಲಟ್ಟು ರಷ್ಯಾದಿಂದ ಹರ್ಟು ಪ್ಯಾಂಟನ್ನಲ್ಲೇ ಫ್ಲೇಟು ಓಡಿಸಿಕೊಂಡು ಬಂದನಂತೆ ಎಂಬ ಅಂತೇತಂತ ಕೇಳಿಸಿಕೊಂಡೆ.
ಇಷ್ಟೇ ಅಲ್ಲ, ಅಲ್ಲೊಂದು ಕಡೆ ದಣದ ಎತ್ತುಗಳನ್ನು ಗೂಟಂದಿಗೆ ಕಟ್ಟಿ ಮೇವು ಹಾಕಿ ಕುಡಿಯಲು ಬಕೆಟ್ನಲ್ಲಿ ನೀರು ಇಟ್ಟಂತೆ ಇದೇ ವಿಮಾನಗಳು ಒಂದು ಕಡೆ ಸಾಲಾಗಿ ನಿಂತು ಸುಧಾರಿಸಿಕೊಳ್ಳುತ್ತವೆ. ರೈತ ಎತ್ತಿನ ಮೈ ಸವರಿ ತುರಿಸಿದಂತೆ ಪೈಲಟ್ಟು ಟೆಕ್ನಿಷಿಯನ್ಸ್ ವಿಮಾನಗಳ ಮೈ ಸವರುತ್ತಾ ಅಲ್ಲೊಂದು ಇಲ್ಲೊಂದು ನಟ್ಟು ಬೋಲ್ಟು ತಿರುಗಿಸುತ್ತಾ ಇಂಧನ ತುಂಬಿಸುತ್ತಿರುತ್ತಾರೆ. ಸದಾ ದಪ್ಪಾತಿ ಪ್ಯಾಸೆಂಜರ್ ವಿಮಾನಗಳನ್ನು ನೋಡಿ ರೂಢಿಯಾಗಿರುವ ನಮಗೆ ಅಷ್ಟೊಂದು ದುಬಾರಿ ಎನಿಸುವ ಆದರೆ ಇಷ್ಟಿಷ್ಟು ಆಕಾರ ಇರುವ ಯುದ್ಧ ವಿಮಾನಗಳನ್ನು ಕಂಡಾಗ ಸೋಜಿಗವಾಗುತ್ತದೆ.
ಇಷ್ಟಕ್ಕೇ ಮುಗಿಯೋದಿಲ್ಲ, ಮರು ದೊಡ್ಡ ಹಾಲ್ಗಳು. ಅವುಗಳಲ್ಲಿ ಯುದ್ಧಸಾಮಗ್ರಿ ತಯಾರಕರ ಶಾಪುಗಳು. ಒಂದು ಕಡೆ ಸರ್ಕಾರಿ ಸ್ವಾಮ್ಯದವು ಇನ್ನೊಂದು ಕಡೆ ಖಾಸಗಿಯವರದ್ದು ಮತ್ತೊಂದು ಕಡೆ ವಿದೇಶಿ ಶಾಪುಗಳು. ಕರ್ನಾಟಕ ಸರ್ಕಾರದ್ದೇ ಒಂದು ಶಾಪ್, ಕೇಂದ್ರ ಸರ್ಕಾರದ್ದೇ ಇನ್ನೊಂದು ಶಾಪ್. ನಾವು ಸೋಶಿಯಲ್ ಮೀಡಿಯಾದಲ್ಲಿ ಕೂತು ಸೈನ್ಯದ ಬಗ್ಗೆ, ದೇಶದ ಬಗ್ಗೆ, ಸಂಸ್ಥೆಗಳ ಬಗ್ಗೆ, ಸೈನಿಕರ ಬಗ್ಗೆ ಬಹಳ ಅಲ್ಪಮತಿಯ ಮಾತುಗಳನ್ನು ಆಡುತ್ತಿರುತ್ತೇವೆ. ಒಂದು ದೇಶವನ್ನು ಹೇಗೆ ಕಟ್ಟಿರುತ್ತಾರೆ, ಅದರಲ್ಲಿನ ಸಂಸ್ಥೆಗಳನ್ನು ಹೇಗೆ ಕಟ್ಟಿರುತ್ತಾರೆ, ಒಂದಕ್ಕೊಂದು ಏನು ಸಂಬಂಧ, ಇವೆಲ್ಲ ಹೇಗೆ ಕಾರ್ಯನಿರ್ವಹಿಸುತ್ತವೆ? ಇವುಗಳ ನಡುವಿನ ಪೈಪೋಟಿ ಎಂಥದು? ಹೇಗೆ ಕೇವಲ ನಾಲ್ಕೈದು ದೇಶಗಳು ಉಳಿದ 190 ದೇಶಗಳನ್ನು ನಿರ್ದೇಶಿಸುತ್ತವೆ? ಯುದ್ಧ ಸಾಮಗ್ರಿಗಳಲ್ಲಿ ಯಾರಲ್ಲಿ ರೇಸಿಂಗ್ ಬಿದ್ದವರು, ಇದು ಇಲ್ಲದಿದ್ದರೆ ಏನು, ಇಲ್ಲದಿದ್ದರೆ ಏನು ಎಂಬಂಥ ಪ್ರಶ್ನೆಗಳು ಹುಟ್ಟುತ್ತವೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಪ್ರಾಮುಖ್ಯತೆ, ಅನಿವಾರ್ಯತೆ ಮತ್ತು ಅಪಾಯ ಎಲ್ಲವೂ ಮನಸಿನಲ್ಲಿ ಹಾದು ಹೋಗುತ್ತವೆ.
