ಬಿಸಿಐ(ಬ್ರೈನ್‌ ಕಂಪ್ಯೂಟರ್‌ ಇಂಟರ್‌ಫೇಸ್‌)

Blog post description.

Madhu Y N

10/14/20251 min read

ಒಂದು ನೂರು ವರ್ಷಗಳ ಹಿಂದೆ ಯಂತ್ರಗಳು ಅಷ್ಟು ದೂರದಲ್ಲಿ ಕೂತು ನಾವು ಹೇಳಿದ ಕೆಲಸ ಮಾಡಿಕೊಡುತ್ತಿದ್ದವು, ಉದಾಹರಣೆಗೆ ಇಂಜಿನ್ನುಗಳು. ಆಮೇಲಾಮೇಲೆ ಅವು ನಮ್ಮ ಸಮೀಪ ಬಂದು ನಮ್ಮೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸತೊಡಗಿದವು, ಉದಾರಣೆಗೆ ಫೋನುಗಳು. ಈಗೀಗ ಅವು ನಮ್ಮ ದೇಹವನ್ನು ಪ್ರವೇಶಲಾರಂಭಿಸಿವೆ. ಉದಾಹರಣೆಗೆ ಮೈಕ್ರೋ ಎಲೆಕ್ಟ್ರೋಡ್‌ಗಳು. ಇವು ನಮ್ಮ ಕೂದಲಿಗಿಂತ ತೆಳುವಾಗಿರುತ್ತವೆ. ಶರೀರದಲ್ಲಿ ಇಂಪ್ಲಾಂಟ್‌ ಆಗಿ ಮೆದುಳಿನ ನರಗಳೊಂದಿಗೆ ಸಂವಹಿಸುತ್ತ ಮೆದುಳನ್ನು ನಿರ್ದೇಶಿಸುತ್ತವೆ. ಪಾರ್ಕಿನ್ಸನ್‌, ಆಲ್ಜೀಮರ್‌ಗಳಂತಹ ಕಾಯಿಲೆಗಳಿಗೆ ಮದ್ದಾಗಲಿವೆ. ಇವುಗಳಿಂದಾಗಿ ನಮ್ಮ ದೇಹವನ್ನು ಸರ್ಕ್ಯೂಟ್‌ನಿಂದ, ನಮ್ಮ ಆಲೋಚನೆಯನ್ನು ಕಂಪ್ಯೂಟರ್‌ನ ಪ್ರೊಸೆಸರ್‌ನಿಂದ ಬೇರ್ಪಡಿಸಿದ್ದ ಗೆರೆ ಕರಗುತ್ತಿದೆ. ಅರ್ಥಾತ್ ಮನುಷ್ಯ ಮತ್ತು ಯಂತ್ರ ಸಂಗಮವಾಗುತ್ತಿರುವ ಕಾಲದಲ್ಲಿದ್ದೇವೆ. ಎಐನಿಂದಾಗಿ ನಮ್ಮ ಜೈವಿಕ ನರಕೋಶಗಳು ಮತ್ತು ಯಾಂತ್ರಿಕ ಸರ್ಕ್ಯೂಟ್‌ಗಳು ಒಂದೇ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿರುವುದನ್ನೂ ಇದೇ ದೃಷ್ಟಿಯಿಂದ ಗಮನಿಸಬೇಕು.

ನೆನ್ನೆ ಮೊನ್ನೆ ತನಕ ನಾವು ಸೈಬಾರ್ಗ್‌ಗಳೆಂದರೆ (ಯಂತ್ರಮಾನವರು) ಲೋಹದ ಕೈಕಾಲುಗಳಿರುವ ಜೀವಿಗಳೆಂದು ಕಲ್ಪಿಸಿಕೊಳ್ಳುತ್ತಿದ್ದೆವು. ನಿಜ ಹೇಳಬೇಕಂದರೆ ಈಗಾಗಲೇ ಒಂದು ರೀತಿಯಲ್ಲಿ ನಾವೇ ಸೈಬಾರ್ಗ್‌ಗಳಾಗಿದ್ದೇವೆ. ನಮ್ಮ ಜೇಬಿನಲ್ಲಿರುವ ಸ್ಮಾರ್ಟ್‌ಫೋನ್ ನಮ್ಮ ಬಾಹ್ಯ ಮೆದುಳಿನಂತೆ ಕೆಲಸ ಮಾಡುತ್ತದೆ. ಅದು ನಮ್ಮ ನೆನಪುಗಳನ್ನು (ಸಂಪರ್ಕಗಳು, ಫೋಟೋಗಳು) ಸಂಗ್ರಹಿಸುತ್ತದೆ, ದಾರಿ ತೋರಿಸುತ್ತದೆ (ಮ್ಯಾಪ್ಸ್), ನಮ್ಮ ಇಡೀ ದೈನಂದಿನ ಜೀವನವನ್ನು ನಿಭಾಯಿಸುತ್ತದೆ, ನಿರ್ದೇಶಿಸುತ್ತದೆ. ತಿನ್ನುವುದು ಮಲಗುವುದು, ಉಸಿರಾಡುವುದರ ಹೊರತು ಎಲ್ಲವನ್ನೂ ಫೋನಿಗೆ ಹೊರಗುತ್ತಿಗೆ ಕೊಟ್ಟುಬಿಟ್ಟಿದ್ದೇವೆ.

ಬಿಸಿಐ ಪೈಕಿಗೆ ಸೇರುವ ಈ ಹೊಸ ತಂತ್ರಜ್ಞಾನಗಳು ನಮ್ಮ ʼಮೆದುಳಿಗೇ ಕೈ ಹಾಕುತ್ತಿವೆʼ ಎಂದರೆ ಉತ್ಪ್ರೇಕ್ಷೆಯೇನಲ್ಲ. ನಮ್ಮ ಮೆದುಳಿನ ಪ್ರತಿ ನರಗಳ ವಿದ್ಯುತ್ ಸಂಕೇತಗಳನ್ನು ಓದಿ ಅವುಗಳನ್ನು ಕಂಪ್ಯೂಟರ್‌ ಅರ್ಥಮಾಡಿಕೊಳ್ಳಬಲ್ಲ ಡಿಜಿಟಲ್ ಸಿಗ್ನಲ್‌ಗಳಾಗಿ ಪರಿವರ್ತಿಸಿ ಸಿಪಿಯುನಲ್ಲಿ ಅವುಗಳ ಕಾರ್ಯತಂತ್ರವನ್ನು ವಿಶ್ಲೇಷಿಸಿ, ಬದಲಾಯಿಸಿ, ಮೆದುಳನ್ನು ಮರುನಿರ್ದೇಶಿಸುವಷ್ಟು ಚಾಣಾಕ್ಷತನ ಹೊಂದಿವೆ ಈ ತಂತ್ರಜ್ಞಾನಗಳು. ನ್ಯೂರಾಲಿಂಕ್, ಸಿಂಕ್ರೊನ್ ಮತ್ತು ಬ್ಲ್ಯಾಕ್‌ರಾಕ್ ನ್ಯೂರೊಟೆಕ್‌ನಂತಹ ಕಂಪನಿಗಳು ಪಾರ್ಶ್ವವಾಯು ಪೀಡಿತ ರೋಗಿಗಳು ಕೇವಲ ಆಲೋಚನೆಯ ಮೂಲಕವೇ ಕಂಪ್ಯೂಟರಿನ ಕರ್ಸರ್ ಚಲಿಸುವಂತೆ ಅಥವಾ ವಾಕ್ಯಗಳನ್ನು ಟೈಪ್ ಮಾಡುವಂತೆ ಮಾಡುವ ಇಂಪ್ಲಾಂಟ್‌ಗಳನ್ನು ರೂಪಿಸುತ್ತಿವೆ ಎಂದರೆ ವಿಷಯ ಗಾಂಭೀರ್ಯತೆ ಊಹಿಸಿಕೊಳ್ಳಿ. ಸದ್ಯಕ್ಕಿನ್ನೂ ನಮಗೊಂದು ಮಾಹಿತಿ ಬೇಕಂದರೆ ಗೂಗಲ್‌ನಲ್ಲಿ ಅಥವಾ ಚಾಟ್‌ಜಿಪಿಟಿಯಲ್ಲಿ ಹುಡುಕುವ ಕಾಲದಲಿದ್ದೇವೆ. ಬಿಸಿಐನಿಂದಾಗಿ ಮುಂದೆ ಬೇಕಾದ ಮಾಹಿತಿಯನ್ನು ಮೆದುಳಿನ ಮೂಲಕ ಹುಡುಕಿ ಮೆದುಳಿಗೆ ಹೊಳೆಸಬಲ್ಲ ದಿನಗಳು ಬರಬಹುದಾಗಿದೆ. ಬರ್ತಾ ಬರ್ತಾ ಇದು ಹೆಂಗಾಗುತ್ತೆ ಅಂದರೆ ಶಿಪ್‌ ಆಫ್‌ ಥೀಸಿಯಸ್‌ ಅನ್ನು ನೆನಪಿಸುತ್ತದೆ. ನಮ್ಮ ಮೆದುಳಿನ ಹಾನಿಗೊಳಗಾದ ಒಂದು ನರಕೋಶವನ್ನು ಕೃತಕ ನರಕೋಶದಿಂದ ಬದಲಾಯಿಸಿದರೆ, ನಾವು ನಾವಾಗಿಯೇ ಇರುತ್ತೀವಿ ಅನ್ನಬಹುದು. ಒಂದು ಲಕ್ಷ ನರಕೋಶಗಳನ್ನು ಬದಲಾಯಿಸಿದಾ ನಾವಾಗೇ ಉಳಿಯುತ್ತೀವಾ? ಮೆದುಳಿನ ಒಂದು ಭಾಗವನ್ನು ತೆಗೆದು ಅಲ್ಲಿ ನೆನಪಿನ ಶಕ್ತಿ ಅಥವಾ ಗಣಿತದ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ನ್ಯೂರಲ್ ಪ್ರೊಸೆಸರ್ ಅಳವಡಿಸಿಬಿಟ್ಟರೆ ಹೇಗೆ? ನಾವು ಸತ್ತರೂ ಆ ಚಿಪ್ಪು ಉಳಿಯುತ್ತದಲ್ಲ, ಆಗ ನಾವು ನಿಜಕ್ಕೂ ಸತ್ತಂತೆ ಅರ್ಥವಾ? ಈಗ ಸ್ಟೆಮ್‌ ಸೆಲ್‌ ಸಂರಕ್ಷಿಸುವ ಮೂಲಕ ನಮ್ಮನ್ನು ನಾವು ಬ್ಯಾಂಕ್‌ನಲ್ಲಿ ಸೇವ್‌ ಮಾಡುತ್ತಿದ್ದೇವೆ. ಮುಂದೆ ನಮ್ಮ ಮೆದಳುನ್ನು ಚಿಪ್‌ಗೆ ಕಾಪಿ ಮಾಡಿ ಡೇಟಾಸೆಂಟರ್‌ನಲ್ಲಿಟ್ಟು ಸತ್ತರೆ? ಸಾವಿರ ವರುಷಗಳ ನಂತರ ಇಂದಿನ ಡೇಟಾಸೆಂಟರುಗಳೇ ಮುಂದಿನ ಪಿರಮಿಡ್ಡುಗಳಂತಾಗುವುದಿಲ್ಲವೇ?

ಜೊತೆಗೆ ಇಂತಹ ಅರ್ಧಂಬರ್ಧ ಕೃತಕ ಮೆದುಳು ಹೊಂದಿದಾಗ ನಾವು ಆವಿಷ್ಕರಿಸುವ ಹೊಸ ವಸ್ತುವೊಂದರ ಶ್ರೇಯಸ್ಸು ಯಾರಿಗೆ ಸಲ್ಲುತ್ತೆ? ಅಥವಾ ಆ ಕೃತಕ ಮೆದುಳನ್ನು ಬಳಸಿ ಯಾರನ್ನಾದರೂ ಕೊಂದರೆ ಪಾಪ ಯಾರಿಗೆ ತಟ್ಟುತ್ತೆ? ನೈತಿಕ ಹೊಣೆ ಯಾರು ಹೊರಬೇಕು? ಶಿಕ್ಷೆ ಯಾರಿಗೆ ಕೊಡಬೇಕು?

ಮರೆವು ಮನುಷ್ಯನ ಮೂಲಭೂತ ಲಕ್ಷಣ. ಅದು ನಾವು ಒಬ್ಬ ವ್ಯಕ್ತಿಗೆ ತೋರುವ ಕ್ಷಮಾಪಣೆಯೂ ಹೌದು, ನಮ್ಮ ನೋವಿಗೆ ಪರಿಹಾರವೂ ಹೌದು. ಈಗಿರುವ ತಂತ್ರಜ್ಞಾನಗಳೇ ಮರೆವಿಗೆ ಪರ್ಯಾಯವಾಗಿ ನೆನಪುಗಳನ್ನು ಸಿಲಿಕಾನ್‌ ಚಿಪ್ಪಿನಲ್ಲಿ ಉಳಿಸುತ್ತಿದ್ದಾವೆ. ಮನುಷ್ಯ ಸಾಯೋತನಕ ಯಾರೋ ಮಾಡಿದ ಅವಮಾನ, ಯಾರೋ ಅಂದ ಚುಚ್ಚುಮಾತು ನೆನಪಿಟ್ಟುಕೊಂಡು ಏನು ಮಾಡುವುದು?

ನೀಲ್‌ ಪೋಸ್ಟ್‌ಮನ್‌ ಪ್ರತಿ ಹೊಸ ತಂತ್ರಜ್ಞಾನ ಒಂದು ವರ್ಗಕ್ಕೆ ಒಳ್ಳೆಯದು ಮಾಡಿದರೆ ಇನ್ನೊಂದು ವರ್ಗಕ್ಕೆ ಕೆಟ್ಟದು ಉಂಟು ಮಾಡಿ ಅಸಮಾನತೆ ಹೆಚ್ಚಿಸುತ್ತದೆ ಅನ್ನುತ್ತಾನೆ. ಸೈಬೊರ್ಗ್‌ ಮಟ್ಟಕ್ಕೆ ಏರಿರುವವರು ಕೆಲವೇ ಗಂಟೆಗಳಲ್ಲಿ ಏನೇನೋ ಕಲಿಯಬಹುದು, ಊಹಿಸಲಾಗದ ವೇಗದಲ್ಲಿ ಡೇಟಾವನ್ನು ಸಂಸ್ಕರಿಸಬಹುದು. ನಿಸರ್ಗದ ಮಿತಿಯಲ್ಲಿರುವವರು ಈ ಶಕ್ತಿಗಳಿಲ್ಲದೇ ಮಂದಮತಿಗಳಾಗಿ ಹಿಂದೆ ಉಳಿಯಬಹುದು. ಇದೊಂದು ಹೊಸ ಬಗೆಯ ಜೈವಿಕಮಟ್ಟದ ವರ್ಗ ವಿಭಜನೆ ಹುಟ್ಟುಹಾಕುತ್ತಿದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆ.

ಇದೆಲ್ಲವೂ 'ಹೋಮೋ ಸೇಪಿಯನ್ಸ್' ಪ್ರಭೇದ ಕವಲೊಡೆಯುತ್ತಿರುವ ಲಕ್ಷಣವಾ? ಸುಮ್ಮನೆ ಯೋಚಿಸಿ ನೋಡಿ. ಜೆನ್‌ ಜಿ ಅಂತೀವಲ್ಲ ಅವರ ಭಾಷೆಯೇ ಬೇರೆಯಿದೆ. ನಮ್ಮ ಭಾಷೆ ನಮ್ಮ ಅಜ್ಜಿ ತಾತರಿಗೆ ಅರ್ಥವಾಗುತ್ತಿರಲಿಲ್ಲ. ಜೆನ್‌ ಜಿ ಭಾಷೆ ನಮಗೆ ಅರ್ಥವಾಗುತ್ತಿಲ್ಲ. ನಮ್ಮ ಸಂವೇದನೆಗಳೂ ಅವರ ಸಂವೇದನೆಗಳೂ ಅದಾಗಲೇ ಬಹಳ ವಿಭಿನ್ನ ಎಂದು ಸಾಬೀತಾಗಿದೆ. ಇಲ್ಲಿ ಯಾರೂ ತಪ್ಪಲ್ಲ ಯಾರೂ ಸರಿಯಲ್ಲ. ಹೊಸ ಬಗೆಯ ಹೋಮೋ ಸೇಪಿಯನ್ನಿನ ಉತ್ತರಾಧಿಕಾರಿಗಳು ಇವರೇ ಇರಬಹುದಾ ಅನ್ನಿಸುತ್ತದೆ. ನಿಮಗಿನ್ನೂ ಐದಾರು ವರ್ಷದ ಮಗುವಿದ್ದಲ್ಲಿ ಖಂಡಿತ ಅದು ನೀವು ಅಂದುಕೊಂಡ ಮನುಷ್ಯನಾಗಿ ಉಳಿದಿರುವುದಿಲ್ಲ.

ಹಿಂದಿನಕಾಲದಲ್ಲಿ ಅತೀಂದ್ರಿಯವಾದಿಗಳು ಮೋಕ್ಷ ಹೊಂದಿ ದೈವಿಕ ಪ್ರಜ್ಞೆಯೊಂದಿಗೆ ಒಂದಾಗಲು ಬಯಸುತ್ತಿದ್ದರು; ಈಗಿನ ಕಾಲದಲ್ಲಿ ತಂತ್ರಜ್ಞರು ಕೃತಕ ಬುದ್ಧಿಮತ್ತೆಯೊಂದಿಗೆ ಒಂದಾಗಲು ಬಯಸುತ್ತಿದ್ದಾರೆ. ಒಂದು ಆಧ್ಯಾತ್ಮದ ಮೂಲಕ, ಇನ್ನೊಂದು ಸರ್ಕ್ಯೂಟ್ ಮೂಲಕ. ಆದರೆ ಆಧ್ಯಾತ್ಮದ ಉದ್ದೇಶ ಮನುಷ್ಯನ ಅಹಂಕಾರವನ್ನು ಕರಗಿಸುವುದಾಗಿತ್ತು; ತಾಂತ್ರಿಕ ವಿಲೀನದ ಉದ್ದೇಶ ಅಹಂಕಾರ ಹೆಚ್ಚಿಸುವುದಾಗಿರುತ್ತದೆಯೇ?